ತೃಪ್ತ ಪ್ರಾರ್ಥನೆ

ಮನುಷ್ಯನನ್ನು ಮನುಷ್ಯತ್ವ ಜಾತಿಯಿಂದ ಅಳೆದರೂ ಅಷ್ಟೇ... ಅವನ ಪ್ರಾರ್ಥನೆಯ ಬಹುಪಾಲು ಸ್ವಂತಕ್ಕಾಗಿಯೇ ಇರುತ್ತದೆ. ದೇವಾಲಯ, ಚರ್ಚ್ ಮಸೀದಿಗಳಲ್ಲಾಗಲಿ ದೇವರು ಪಡೆಯುವ ಪ್ರಾರ್ಥನೆಗಳು ವ್ಯಕ್ತಿಯ ಸ್ವಂತ, ಪರ ಅಥವಾ ಬಹು ಉದಾರವೆಂದರೆ ಲೋಕಕ್ಕಾಗಿಯಾಗಿರುತ್ತದೆಯಲ್ಲವೇ?
                                            ಈಗ ನನ್ನ ಮಾತೇನೆಂದರೆ, ಧರ್ಮಗ್ರಂಥಗಳ ಪ್ರಕಾರ ದೇವರು ಒಬ್ಬ ಅಸಾಧಾರಣ, ಅತಿ ಶಕ್ತಿಯುತ ಹಾಗೂ ತೇಜೋಮಯ ಮನುಷ್ಯರೂಪದವನಾಗಿರುತ್ತಾನೆ. ಎಲ್ಲಾ ಗ್ರಂಥಗಳಲ್ಲಿ ತಿಳಿಸಿರುವ ಹಾಗೆ ದೇವತಾ ರೂಪವಾದರೂ ಕಷ್ಟವನ್ನು ಅನುಭವಿಸಲೇಬೇಕು. ಕರ್ಮಫಲವಾದದ್ದು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ ಎಂದಾಗಿದೆ.
                    ಹೀಗಿರುವಾಗ ನನಗೆ ಚಿಂತೆಯೊಂದು ಬಂದೊದಗಿತ್ತು. ನಮ್ಮ ಪ್ರಾರ್ಥನೆಗಳೇಕೆ ನಾವು ತೃಪ್ತವಾಗಿದ್ದೇವೆ ಎಂದಿರಬಾರದು? ಮನುಷ್ಯ ಸಮಾಜದಲ್ಲಿ ಸ್ವಾಭಿಮಾನಕ್ಕಾಗಿಯೋ ಇತರ ಯಾವುದೇ ಕಾರಣಕ್ಕಾಗಿಯೋ ತಲೆತಗ್ಗಿಸಿದ ನಾವು ನಮ್ಮ ಕಷ್ಟಗಳನ್ನು ಸ್ವತಃ ನಾವೇ ಅನುಭವಿಸಬೇಕಾದ ಸಂದರ್ಭ ಬಂದೊದಗಿದಾಗ ದೇವರ ಸಹಾಯಕ್ಕಾಗಿ ಪ್ರಾರ್ಥಿಸ ತೊಡಗುವುದು ಎಷ್ಟು ಸರಿಯಾದೀತು? ದೇವನೇ ಮನುಷ್ಯನ ಸೃಷ್ಟಿಕರ್ತೃನಾಗಿದ್ದಾನೆ. ಆದ್ದರಿಂದ  ಸಹಾಯ ಯಾಚಿಸುವುದರಲ್ಲಿ ತಪ್ಪೇನಿದೆ ಎನ್ನುವ ಹಾಗಿದ್ದರೆ ನನ್ನದೊಂದು ಕೊನೆಯ ಮಾತಿದೆ.
                                         ಆತ ಸೃಷ್ಟಿಕರ್ತ ಪ್ರತಿಯೊಬ್ಬರಿಗೂ ಇಚ್ಛಾಶಕ್ತಿ, ಮನೋಬಲಗಳೆಂಬ ದಿವ್ಯಾಯುಧಗಳನ್ನು ನೀಡಿದ್ದಾನೆ ಎಂಬುದನ್ನು ಮರೆತು ಕೂತಿದ್ದೇವೆ. ಈ ದಿವ್ಯಾಸ್ತ್ರಗಳು ಸಾಧಾರಣ ಮನುಷ್ಯನನ್ನು ದೇವನನ್ನಾಗಿಸುವ ಶಕ್ತಿಯನ್ನು ಹೊಂದಿರುವಷ್ಟು ಪ್ರಬಲವಾಗಿರುವಾಗ ಅವಶ್ಯ ಕಾಲದಲ್ಲಿ ಅವುಗಳ ಬಳಸುವಿಕೆಯನ್ನು ಮರೆತು ಕೂರುವುದು ಶ್ರೀಮಂತ ಹಣಕ್ಕಾಗಿ ಭಿಕ್ಷೆ ಬೇಡಿದಂತಾಗುತ್ತದೆ. ಅದಕ್ಕಾಗಿ ನಮಗೆ ಬರುವ ಕಷ್ಟಗಳನ್ನು , ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಲು ಉಪಯೋಗಿಸಿದರಾಯಿತಷ್ಟೇ.. ಕಷ್ಟ ಮಾಯವಾಗುವುದರಲ್ಲಿ ಯಾವುದೇ ಸಂದೇಹವಿದ್ದರೂ ಬಗೆಹರಿಯುತ್ತದೆ.
        ನಾವೆಷ್ಟು ಸಶಕ್ತ ರೆಂಬುದು ಅರಿವಾದಾಗ ನಮ್ಮಲ್ಲಿ ಆ ಶಕ್ತಿಯನ್ನು ತುಂಬಿರುವವನಿಗೆ ಧನ್ಯವಾದಗಳನ್ನು ಅರ್ಪಿಸಬೇಕು ತಾನೇ? ಆದ್ದರಿಂದ ನಮ್ಮ ಪ್ರಾರ್ಥನೆಗಳು ದೇವರಿಗೆ ಧನ್ಯವಾದಗಳನ್ನು ಸಮರ್ಪಿಸುವಂತಾಗಲಿ. ಲೋಕದ ಕಷ್ಟವನ್ನು ಕೇಳುವ ದೇವನ ಕಷ್ಟಗಳಿಗಾಗಿ ನಾವೇಕೆ ಪ್ರಾರ್ಥಿಸಬಾರದು? ನಮ್ಮ ಸೀಮಿತ ಯೋಚನೆಗಳಿಂದ ಹೊರಬಂದು ಮಂದಿರಾದಿಗಳ ಪ್ರಾರ್ಥನೆಯು ನಮಗೆ ಪ್ರತಿಯೊಂದನ್ನು ನೀಡಿರುವ ದೇವನ ಸುಖ ವಿಚಾರಣೆಗಾಗಿ ಏಕೆ ಆಗಿರಬಾರದು?
           ಮುಂದಿನ ಬಾರಿ ಪ್ರಾರ್ಥಿಸುವಾಗ ಹೀಗೆ ಪ್ರಾರ್ಥಿಸೋಣ." ಹೇ !ಭಗವಂತ... ನಿನ್ನ ಕೊಡುವಿಕೆಯಿಂದ ನಾನು ತೃಪ್ತನಾಗಿದ್ದೇನೆ. ಅದಕ್ಕಾಗಿ ಈ ಭಕ್ತನ ಹೃದಯದ ಪ್ರೀತಿ ತುಂಬಿರುವ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ದಯವಿಟ್ಟು ಸ್ವೀಕರಿಸು".

Comments